ನದಿಗಳನ್ನು ಉಳಿಸೋಣ ಬನ್ನಿ
“ವಿಜ್ಞಾನಿ ಸಂತ ಜಿ ಡಿ ಅಗರವಾಲರ ಸ್ಮರಣಾರ್ಥ ಕಾರ್ಯಕ್ರಮದ” ಒಂದು ವರದಿ

ಡಿಸೆಂಬರ್ 1, 2018 ರಂದು ಬೆಂಗಳೂರಿನ ಗಾಂಧಿ ಭವನದಲ್ಲಿ ಗ್ರಾಮ ಸೇವಾ ಸಂಘ ಗಂಗಾನದಿಯನ್ನು ಉಳಿಸಲು ತನ್ನ ಕೊನೆಯುಸಿರಿನತನಕ ಉಪವಾಸಮಾಡಿದ ವಿಜ್ಞಾನಿ ಸಂತ ಜಿ ಡಿ ಅಗರವಾಲರ (ಸ್ವಾಮಿ ಜ್ಞಾನ ಸ್ವರೂಪ್ ಸಾನಂದ್) ಸ್ಮರಣಾರ್ಥ ಆಯೋಜಿಸಿದ್ದ “ನದಿಗಳನ್ನು ಉಳಿಸೋಣ ಬನ್ನಿ!” ಕಾರ್ಯಕ್ರಮದಲ್ಲಿ ಸಾಣೇಹಳ್ಳಿ ಶ್ರೀ. ಪಂಡಿತಾರಾಧ್ಯ ಸ್ವಾಮೀಜಿ, ರಾಷ್ಟ್ರೀಯ ಸ್ವಾಭಿಮಾನ ಆಂದೋಲನದ, ಬಸವರಾಜ್ ಪಾಟೀಲ್, ನೀರಿನ ತಜ್ಞ ವಿಶ್ವನಾಥ್ ಶ್ರೀಕಂಠಯ್ಯ, ರಾಜ್ಯಸಭಾ ಸದಸ್ಯ ಪ್ರೊ. ಎಂ ವಿ ರಾಜೀವ್ ಗೌಡ, ವಿಜ್ಞಾನಿ ಹಾಗು ಲೋಕವಿದ್ಯಾ ಕಾರ್ಯಕರ್ತ ಅಭಿಜಿತ್ ಮಿತ್ರ, ಮಾಜಿ ವಿಧಾನ ಸಭಾ ಅಧ್ಯಕ್ಷ, ಬಿ ಎಲ್ ಶಂಕರ್, ಕರ್ನಾಟಕ ಗಾಂಧಿ ಸ್ಮಾರಕ ನಿಧಿಯ ಡಾ ವೂಡೇ ಪಿ. ಕೃಷ್ಣ, ಪರಿಸರ ತಜ್ಞರಾದ ಸಿ. ಯತಿರಾಜು, ಲಿಯೋ ಎಫ್ ಸಲ್ಡಾನ್ಹಾ ಹಾಗು ಮತ್ತಿತರ ಹೋರಾಟಗಾರರು ಪಾಲ್ಗೊಂಡಿದ್ದರು.


ಪ್ರಸನ್ನರವರು, ವಿಜ್ಞಾನ ಒಂದು ಕಡೆ, ಧರ್ಮ ಒಂದು ಕಡೆ, ಪರಿಸರ ಒಂದು ಕಡೆ, ಸರ್ಕಾರ ಒಂದು ಕಡೆ, ಒಡಕು ಉಂಟಾಗಿದೆ ಇಂದು, ಎಂದು ತಮ್ಮ ಪ್ರಾಸ್ತಾವಿಕವಾಗಿ ಮಾತನ್ನು ಪ್ರಾರಂಭಿಸಿದರು. ವಿಜ್ಞಾನ ಮತ್ತು ಪರಿಸರ ಪರಸ್ಪರ ವಿರೋದಿಗಳಲ್ಲ. ಕರ್ನಾಟಕದ ನದಿಗಳಿಗೆ ಪಶ್ಚಿಮ ಘಟ್ಟಗಳು ತಾಯಿ. ಬಯಲು ಸೀಮೆಯಲ್ಲಿ ನೀರಿನ ಕೊರತೆ ಉಂಟಾಗಿದೆ ಇಂದು, ಅಂತರ್ಜಾಲದ ಪೋಷಣೆಯು ಆಗುತ್ತಿಲ್ಲ ಇಂದು. ಮರುಭೂಮಿಗೊಳುತ್ತಿರು ರಾಜ್ಯಗಳಲ್ಲಿ 2ನೇ ಸ್ಥಾನದ ಕರ್ನಾಟಕದ್ದು, ಮೊದಲು ರಾಜಸ್ಥಾನ. ರಾಜ್ಯ ಸರ್ಕಾರ ಕಲುಷಿತಗೊಂಡ ರಾಜ್ಯದ ನದಿಗಳ ಶುದ್ಧೀಕರಣಕ್ಕೆ ಘೋಷಿಸಿರುವ ಸಮಿತಿ ಕೇವಲ ಘೋಷಣೆಯಾಗಿ ಉಳಿಯದಿರಲಿ. ಜಿ ಡಿ ಅಗರ್ವಾಲರು ಉಪವಾಸದ ಸಂಧರ್ಭದಲ್ಲಿ ಖುದ್ದಾಗಿ ಪ್ರಧಾನಿಯವರಿಗೆ ತಾಯಿ ಗಂಗೆಯನ್ನು ಉಳಿಸುವಬಗ್ಗೆ 3 ಪತ್ರಗಳನ್ನು ಬರೆಯುತ್ತಾರೆ, ಆದರೆ ಅವರ ಉಪವಾಸವನ್ನು ಕೇಂದ್ರ ಸರ್ಕಾರ ನಿರ್ಲಕ್ಷಿಸುತ್ತದೆ. ಇಂದು ಉತ್ತರ ಭಾರತದ ಸಂತರು ಕೇಂದ್ರ ಸರ್ಕಾರದ ಮೇಲೆ ಬೇಸರಗೊಂಡಿದ್ದಾರೆ. ಗ್ರಾಮ ಸೇವಾ ಸಂಘದ ಈ ಪ್ರಯತ್ನ ಇಲ್ಲಿಯವರೆಗೆ ನದಿಗಳನ್ನು ಉಳಿಸಲು ಹೋರಾಟದಲ್ಲಿ ತೊಡಗಿರುವ ಎಲ್ಲ ಸಂಸ್ಥೆ, ವ್ಯಕ್ತಿಗಳ ಪ್ರಯತ್ನವನ್ನು ಕ್ರೋಡೀಕರಿಸುವ, ಅವಕ್ಕೆ ಶಕ್ತಿ ತುಂಬುವ ಪ್ರಯತ್ನವೆಂದು ಕಾರ್ಯಕ್ರಮದ ಬಗ್ಗೆ ತಿಳಿಸಿದರು.

ಶ್ರೀ. ಪಂಡಿತಾರಾಧ್ಯ ಶಿವಾಚಾರ್ಯ ಸ್ವಾಮೀಜಿಗಳು ಕಾರ್ಯಕ್ರಮವನ್ನು ಅಧಿಕೃತವಾಗಿ ಉದ್ಘಾಟಿಸಿ, ಮನುಷ್ಯ ತನ್ನ ಸ್ವಾರ್ಥಕ್ಕಾಗಿ ಪ್ರಕೃತಿಯನ್ನು ದುರ್ಬಳಕೆ ಮಾಡಿಕೊಳ್ಳುತ್ತಾನೆ. ಮಾತೆ ಎಂದು ಕರೆಯುವ ಪ್ರಕೃತಿಯ ಮೇಲೆ ಅತ್ಯಾಚಾರ ಮಾಡುತ್ತಿದ್ದೇವೆ. ಸರಳ ಜೀವನ ಮತ್ತು ಉನ್ನತ ಚಿಂತನೆ ಪರಿಸರವನ್ನು ಉಳಿಸುತ್ತದೆ. ಹಿರಿಯರು ಪ್ರಕೃತಿಯನ್ನು ದೇವರಂತೆ ನೋಡುತ್ತಿದ್ದರು, ಇಂದು ಅದು ಸಂಪತ್ತು. ಇವತ್ತು ವಿಜ್ಞಾನಕ್ಕೂ ಧರ್ಮಕ್ಕೂ ಸಂಭಂದ ಕಳಚಿಕೊಂಡಿದೆ. ಆದರೆ ಇವು ಒಂದೇ ನಾಣ್ಯದ ಎರಡು ಮುಖಗಳು. ವಿಜ್ಞಾನ ಧರ್ಮ ಒಂದಾದರೆ ಸಮಾಜದಲ್ಲಿ ಬದಲಾವಣೆ ತರಬಹುದು. ಮೊದಲು ನಮ್ಮ ಮನಸ್ಸು ಯೋಚನೆಗಳು ಶುದ್ಧಿಯಾದರೆ ಪರಿಸರ ಶುದ್ಧವಾಗುತ್ತದೆ. ಪಂಚೇಂದ್ರಿಯ ಪಾವಿತ್ರ್ಯತೆ ಪರಿಸರವನ್ನು ಪವಿತ್ರಗೊಳಿಸುತ್ತದೆ ಎಂದರು. ಕಾರ್ಖಾನೆ, ನಗರದ ತ್ಯಾಜ್ಯನೀರು, ಬಳಸುವ ರಾಸಾಯನೀಕ ಗೊಬ್ಬರ, ಕ್ರಿಮಿನಾಶಕ ಎಗ್ಗಿಲ್ಲದೆ ನದಿಗಳಿಗೆ ಹರಿಸುತ್ತಿದ್ದೇವೆ. ನದಿಗಳು ಉಳಿಯದಿದ್ದರೆ ನಾಗರೀಕತೆ ಸರ್ವನಾಶವಾಗಲಿದೆ, ಎಂದು ಅಭಿಪ್ರಾಯಪಟ್ಟರು. “ಗಂಗಾ ಸ್ನಾನ ತುಂಗಾ ಪಾನ” ವನ್ನು ಮಾಡುವಸ್ಥಿತಿಯಲ್ಲಿ ಈ ನದಿಗಳನ್ನು ಉಳಿಸಿಕೊಂಡಿಲ್ಲ. ಹಾಗಾಗಿ ರಾಜ್ಯ ಸರ್ಕಾರ ಮಲಿನಗೊಂಡ 17 ನದಿಗಳನ್ನು ಶುಚಿಗೊಲಿಸುವುದಾಗಿ ಘೋಷಿಸಿರುವುದನ್ನು ಶಿಘ್ರ ಅನುಷ್ಟಾನಗೊಳಿಸಬೇಕೆಂದು ಒತ್ತಾಯಿಸಿದರು, ಕೆಲವು ಶರಣರ ವಚನಗಳ ಮೂಲಕ ನಮ್ಮಲಿ ಕಣ್ಮರೆಯಾಗುತ್ತಿರುವ ಒಳ ಅರಿವನ್ನು ಉಲೇಖಿಸಿದರು.

ನೀರಿನ ತಜ್ಞರಾದ ವಿಶ್ವನಾಥ್ ಶ್ರೀಕಂಠಯ್ಯ ತಮ್ಮ ಅನುಭವದ ಮಾತ್ತುಗಳನ್ನು ಈರೀತಿಯಾಗಿ ವ್ಯಕ್ತಪಡಿಸಿದರು, ಜಿ ಡಿ ಅಗರ್ವಾಲರು ವಿಜ್ಞಾನಿ ಯಾಗಿ ಹಾಗೂ ಸಂತರಾಗಿ ಗಂಗೆಯನ್ನು ಕಂಡವರು. ಗಂಗಾನದಿಯಲ್ಲಿ ನಡೆಯುತ್ತಿದ್ದ ಮರಳು ಗಣಿಗಾರಿಕೆ, ಕಾಡು ನಾಶ ಹಾಗೂ ಗಂಗೆ ಹರಿವಿಗೆ ಅಡೆ ತಡೆ ಯಾದ ಆಣೆಕಟ್ಟುಗಳ ನಿರ್ಮಾಣದ ಬಗ್ಗೆ ವಿರೋಧ ವ್ಯಕ್ತ ಪಡಿಸಿದ್ದರು. ನಾವು ನಮ್ಮ ಮನೆಯಲ್ಲಿ ಮಾಡುವ ಸುಸ್ಥಿರವಲ್ಲದ ಸಣ್ಣ ಪುಟ್ಟ ಚಟುವಟಿಕೆಗಳು ನದಿಗಳಿಗೆ ಮಾರಕವಾಗಿದೆ. ಭತ್ತ ಕಬ್ಬು ನದಿಗಳನ್ನು ರಕ್ಷಿಸಲಾರವು. ಶೇಕಡಾ 65% ಜನ ತಮ್ಮ ದಿನಬಳಕೆಯ ನೀರಿಗಾಗಿ ಅಂತರ್ಜಲದ ಮೇಲೆ ಅವಲಂಬಿಸಿದ್ದಾರೆ. ಪ್ರಪಂಚದಲ್ಲಿ ಭಾರತವು ಅತಿ ಹೆಚ್ಚು ಅಂತರ್ ಜಲದ ಮೇಲೆ ಅವಲಂಬಿಸಿದ್ದಾರೆ. ಸುಮಾರು 33ಮಿಲಿಯನ್ ಬೋರ್ವೆಲ್ ಗಳು ಇದೆ. ಅತಿಯಾದ ಅಂತರ್ಜಲದ ಬಳಿಕೆ ನದಿಗಳನ್ನು ಕೊಲ್ಲುತ್ತಿದೆ. ಅರ್ಕಾವತಿ ನದಿಯು ಅದಕ್ಕೆ ಅದು ಒಂದು ಉದಾಹರಣೆ ಯಾಗಿದೆ ಎಂದರು.

ರಾಷ್ಟ್ರೀಯ ಸ್ವಾಭಿಮಾನ ಆಂದೋಲನದ, ರಾಷ್ಟ್ರೀಯ ಸಂಚಾಲಕರಾದ ಬಸವರಾಜ್ ಪಾಟೀಲ್, ಗಂಗಾನದಿಗೆ ನಡೆದ ಹೋರಾಟಗಳು ವ್ಯರ್ಥವಾಗಬಾರದು. ಸಂವೇದನಾಹೀನ ಸರ್ಕಾರಗಳಿಗೆ ಜಿ ಡಿ ಅಗರ್ವಾಲರಂತಹ ಬಲಿದಾನ ಅವಶ್ಯಕವಿರಲಿಲ್ಲ ಎಂಬುದು ನನ್ನ ವಯಕ್ತಿಕ ನಂಬಿಕೆ. ಸಂತ ಗೋಪಾಲ ದಾಸ್ ಗಂಗೆಯನ್ನು ಉಳಿಸುವಂತೆ ಇಂದಿಗೂ ನೂರಕ್ಕೂ ಹೆಚ್ಚು ದಿನ ಉಪವಾಸ ಮಾಡುತ್ತಿದ್ದು, ಸರ್ಕಾರ ಅವರನ್ನು ಒತ್ತಾಯ ಪೂರ್ವಕವಾಗಿ ಆಸ್ಪತ್ರೆಗೆ ಸೇರಿಸುತ್ತಿದೆ. ಗಂಗೆಗಾಗಿ ಇಪ್ಪತ್ತುಸಾವಿರ ಕೋಟಿ ವೆಚ್ಚವಾದರೂ ಯಾವ ಪರಿಣಾಮವು ಕಂಡುಬಂದಿಲ್ಲ ಎಂದರು.

ರಾಜ್ಯಸಭಾ ಸದಸ್ಯ ಪ್ರೊ. ಎಂ ವಿ ರಾಜೀವ್ ಗೌಡ ಮರಳು ಗಣಿಗಾರಿಕೆ ಪರಿಸರಕ್ಕೆ ಮಾರಕವಾಗಿದ್ದು, ಅದು ಮೊದಲು ನಿಲ್ಲಬೇಕಾಗಿದೆ. ಕಾವೇರಿ ನೀರು ಎಲ್ಲರಿಗೂ ಬೇಕು. ಆದರೆ ಅದನ್ನು ಉಳಿಸುವ ಕೆಲಸ ಬಗ್ಗೆ ಯಾರೂ ಯೋಚನೆ ಮಾಡುತ್ತಿಲ್ಲ. ಕಾವೇರಿ ಉಗಮ ಸ್ಥಾನದಲ್ಲೇ ಅಭಿವೃದ್ಧಿ ಹೆಸರಿನಲ್ಲಿ ರೈಲ್ವೇ ಹಳಿಗಳನ್ನು ನಿರ್ಮಾಣ ಮಾಡುವ ಕೆಲಸಕ್ಕೆ ಕೈ ಹಾಕಿ ಕಾಡನ್ನು ನಾಶ ಮಾಡುತ್ತಿದ್ದೇವೆ. ಬೆಳ್ಳಂದೂರು ಕೆರೆಯಲ್ಲಿ ಬೆಂಕಿ ನೋಡುತ್ತಿದ್ದೇವೆ ಹಾಗೂ ವೃಷಭಾವತಿ ಯಲ್ಲಿರುವ ರಾಸಾಯನಿಕಗಳು ಭಯ ಹುಟ್ಟಿಸುತ್ತದೆ. ಆ ನೀರಿನಲ್ಲಿ ಬೆಳೆಯುವ ತರಕಾರಿಯನ್ನು ಬೆಳೆದು ತಿನ್ನುತಿದ್ದೇವೆ. ನಾಗರಿಕರ ಸಾಮೂಹಿಕ ಪಾಲ್ಗೊಳ್ಳುವಿಕೆ ಹಾಗೂ ವಯಕ್ತಿಕ ಆಯ್ಕೆಗಳ ನಡೆವೆ ಸಮನ್ವಯತೆಯಿಲ್ಲದಾಗಿದೆ. ಸರಿಯಾದ ನೀತಿ ಹಾಗೂ ಕೌಶಲ್ಯ ಬಳಸಿ ಪಟ್ಟಣಗಳನ್ನು ಯೋಜಿಸುವುದು ನದಿ ಉಳಿಯಲು ಮುಖ್ಯವಾಗಿದೆ. ಈ ನಿಟ್ಟಿನಲ್ಲಿ ಅಗರವಾಲರ ಸಾವು ಎಲ್ಲರನ್ನೂ ಎಚ್ಚೆತ್ತು ಕೊಳ್ಳುವಂತೆ ಮಾಡಬೇಕು ಎಂದು ಅಭಿಪ್ರಾಯ ಪಟ್ಟರು.

ಪರಿಸರ ತಜ್ಞ ಸಿ.ಯತಿರಾಜ್ ತಮ್ಮ ಪಶ್ಚಿಮಘಟ್ಟದ ಹೋರಾಟದ ಅನುಭವದಿಂದ ಮಾಧವ್ ಗಾಡ್ಗಿಲ್ ಹಾಗೂ ಕಸ್ತೂರಿ ರಂಗನ್ ಅವರ ವರದಿಯನ್ನು ನಿರ್ಲಕ್ಷಿಸಲಾಗುತ್ತಿದೆ. ನದಿಗಳನ್ನು ನಾವು ಸಮಗ್ರವಾಗಿ ನೋಡುತ್ತಿಲ್ಲ. ಪಶ್ಚಿಮ ಘಟ್ಟವನ್ನು ಉಳಿಸಿದರೆ ಮಾತ್ರ ಕರ್ನಾಟಕದ ನದಿಗಳನ್ನು ಉಳಿಸಬಹುದು ಎಂದು, ಅದಕ್ಕೆ ಸರ್ಕಾರದ ಹೊರತಾಗಿ ಕೆಲಸಗಲಾಗಲಿ ಎಂದು ಆಶಿಸಿದರು.

ಅನುಭವಿ ರಾಜಕಾರಣಿ ಬಿ ಎಲ್ ಶಂಕರ್ ತಮ್ಮ ಮಲೆನಾಡಿನ ಅನುಭವ ಹಾಗೂ ಪ್ರಸ್ತುತ ರಾಜಕೀಯದ ಸ್ಥಿತಿಯ ಬಗೆಗಿನ ಕಟ್ಟು ಸತ್ಯವನ್ನು ನಿಷ್ಟುರವಾಗಿ ವ್ಯಕ್ತಪಡಿಸಿದರು. ಕಳೆದ ಐವತ್ತು ವರ್ಷದಲ್ಲಿ ಅಭಿವೃದ್ಧಿಯ ಹೆಸರಿನಲ್ಲಿ ನದಿಗಳು ಕಲುಷಿತವಾಗಿದೆ. ಕೃಷಿಯಲ್ಲಿ ಬಳಕೆಯಾಗುವ ಕ್ರಿಮಿನಾಶಕ ಇಂದು ಮಲೆನಾಡಿಗೆ ಮಾರಕವಾಗಿದೆ. ಮಲೆನಾಡಿನ ಕಾಡುಗಳಲ್ಲಿ ಸ್ಥಳೀಯ ಮರಗಳನ್ನು ಮೂಲೆ ಗುಂಪು ಮಾಡಿ ಕೇವಲ ಲಾಭದಾಯಕ ಮರಗಳನ್ನು ಬೆಳೆಸಿ ಕಾಡನ್ನು ಹಾಳು ಮಾಡುವ ಕೆಲಸವನ್ನು ಅರಣ್ಯ ಇಲಾಖೆಯೇ ಮಾಡುತ್ತಿದೆ. ನದಿ ಮೂಲಗಳನ್ನು ಉಳಿಸಿಬೇಕಾಗಿದೇ ಇಲ್ಲವಾದಲ್ಲಿ ಮಲೆನಾಡಿನ ನದಿಗಳು ಬಯಲುಸೀಮೆಯ ನದಿಗಳಂತೆ ಒಣಗುತಿವೇ. ಇವುಗಳ ಬಗ್ಗೆ ಚಿಂತಿಸದೆ ಕಾವೇರಿ ಪ್ರತಿಮೆ ಹಾಗೂ ಡಿಸ್ನಿ ಪಾರ್ಕ್ ಗಳಂತಹ ಯೋಜನೆ ರೂಪಿಸುತ್ತಿರುವುದು ಶೋಚನೀಯ. ಹಾಗಾಗಿ ಧರ್ಮ ಗುರುಗಳು ಪರಿಸರ ಸಂರಕ್ಷಣೆಗೆ ಮುಂಚೂಣಿಯಲ್ಲಿ ನಿಲ್ಲಬೇಕು. ಜಿ ಡಿ ಅಗರವಾಲಾರದು ಸಾವಲ್ಲ ಪ್ರಭುತ್ವ ಮಾಡಿದ ಕೊಲೆ, ಅವರ ಸಾವಿಗೆ ಕಾರಣವಾದ ಎಲ್ಲರದೂ ಅಕ್ಷಮ್ಯ ಅಪರಾಧ. ರಾಜಕೀಯವನ್ನು ಕೇವಲ ರಾಜಕಾರಣಿಗಳಿಗೆ ವಹಿಸಿದ್ದರಿಂದ ರಾಜಕೀಯ ವ್ಯಾಪಾರೀಕರಣ ವಾಗಿದೆ. ಹಾಗಾಗಿ ಅದರ ಪುನರ್ ವ್ಯಾಖ್ಯಾನ ನಡೆಯಬೇಕಿದೆ. ಇಂದು ಸಾಮಾಜಿಕ ಬದಲಾವಣೆಗಳನ್ನು ಚುನಾವಣೆಗೆನಿಲ್ಲದ ನಾಯಕರು ಹೋರಾಟಗಾರರಿಂದ ಮಾತ್ರ ಸಧ್ಯ, ಗಾಂಧಿಯ 150 ನೇ ವರ್ಷವಾದ ಇಂದು ಪ್ರಕೃತಿಯ ಸವಾಲುಗಳ ಬಗ್ಗೆ ಕಾರ್ಯಕ್ರಮರೂಪಿಸಿವುದು ಅತ್ಯಂತ ಅರ್ಥಪೂರ್ಣ ಎಂದು ಹೇಳಿ, ತಾವು ಗಂಧಿಯಾನದ ಹೆಸರಿನಲ್ಲಿ ರೂಪಿಸುತ್ತಿರುವ ಕಾರ್ಯಕ್ರಮದ ಬಗ್ಗೆ ತಿಳಿಸಿದರು.

ವಿಜ್ಞಾನ ಹಾಗೂ ಲೋಕವಿದ್ಯಾ ಹೋರಾಟದ ಎರಡರ ಹಿನ್ನೆಲೆಯಿಂದ ಬಂದ ಅಭಿಜಿತ್ ಮಿತ್ರ, ಜಿ ಡಿ ಅಗರವಾಲರು ಗಂಗೆಗಾಗಿ ತಮ್ಮ ಸಂಪೂರ್ಣ ಜೀವನವನ್ನು ಮುಡಿಪಾಗಿಟ್ಟರು. ನಾವು ಹೇಗೆ ನಮ್ಮ ಕುಟುಂಬ ಹಾಗೂ ಸಮಾಜದ ಜೊತೆಯಲ್ಲಿ ಸಂಬಂಧವನ್ನು ಹೊಂದಿದ್ದೇವೆ, ಅದೇ ರೀತಿಯಲ್ಲಿ ಪರಿಸರದ ಜೊತೆಯಲ್ಲಿ ಗಾಢವಾಗಬೇಕು. ನಮ್ಮನು ಆಳಿದವರು ವಿಜ್ಞಾನ ಹಾಗೂ ಧರ್ಮವನ್ನು ಬೇರೆ ಸಂಘಟನೆಗಳ ರೀತಿಯಲ್ಲಿ ಬೇರುಪಡಿಸಿದೆ. ಮಾನವನ ಆಸೆಗಳು ಹೆಚ್ಚಾಗುತ್ತಿದ್ದು, ಪ್ರಾಕೃತಿಕ ಸಂಪನ್ಮೂಲಗಳು ಕೊರತೆಯನ್ನುವಷ್ಟು ಬಳಸುತ್ತಿದ್ದೇವೆ. ವಿಕಾಸದ ಹೆಸರು ಹೇಳುತ್ತ ಬಂದವರು ವಿಕಾಸವನ್ನು ಹೊರತುಪಡಿಸಿ ಬೇರೆ ಎಲ್ಲವನ್ನೂ ಮಾಡುತ್ತಿದ್ದಾರೆ, ವಿಕಾಸದ ವ್ಯಾಖ್ಯಾನವನ್ನು ಬದಲಿಸಿದ್ದಾರೆ ಎಂದು ಅಭಿಪ್ರಾಯಪಟ್ಟರು.

ಜೀವನದುದ್ದಕ್ಕೂ ಕೆರೆ, ನದಿ, ಹುಲ್ಲುಗಾವಲು ಮತ್ತಿತರ ಪ್ರಾಕೃತಿಕ ವಿಷಯಗಳ ಮೇಲೆ ಕಾರ್ಯನಿರ್ವಹಿಸಿದ ಲಿಯೋ ಎಫ್ ಸಲ್ಡಾನ್ಹಾ, ಬೆಂಗಳೂರಿನ 30ಲಕ್ಷ ಮನೆಗಳಿದ್ದು ಕೇವಲ 1.5ಲಕ್ಷ ಮನೆಯಲ್ಲಿ ಮಾತ್ರ ಮಳೆ ಕೊಯ್ಲು ಅಳವಡಿಸಿದ್ದಾರೆ. ಕೋಟಿ ಕೋಟಿ ಹಣವನ್ನು ಖರ್ಚು ಮಾಡಿ ಮನೆ ಕಟ್ಟುತ್ತಾರೆ, ಆದರೆ ಕೇವಲ ಸಾವಿರ ಗಳನ್ನು ಖರ್ಚು ಮಾಡಿ ಮಳೆ ಕೊಯ್ಲುನ್ನು ಅಳವಡಿಸುವುದಿಲ್ಲ. ಹರಿಯುವ ನದಿಗಳಷ್ಟೆ ಜೀವಂತ ನದಿಗಳು, ಹರಿಯದಂತೆ ಅಣೆಕಟ್ಟೆ ಗಳಿಂದ ತಡೆಹಿಡಿದರೆ ಅವು ಸಾಯುತ್ತವೆ. ಅಲ್ಲಿ ಯಾವುದೇ ಜೀವಂತಿಕೆ, ಜೀವ ವೈವಿಧ್ಯತೆ ಇರುವುದಿಲ್ಲ ತಮ್ಮ ಅನುಭವವನ್ನು ವ್ಯಕ್ತಪಡಿಸಿದರು.

ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ ವೂಡೆ ಪಿ ಕೃಷ್ಣ ಇಂದು ಅಭಿವೃದ್ಧಿ ಎಂದರೆ ಕಟ್ಟುವುದು, ಕೇಡವುವುದು ಮತ್ತು ಲಾಭ ಮಾಡುವುದು ಎಂಬ ರೀತಿಯಲ್ಲಿ ಅರ್ಥವಾಗಿದೆ. ಗಾಂಧಿಯವರ ಜೀವನ ನಮಗೆ ಪ್ರೇರಣೆಯಾಗಲಿ. ಒಮ್ಮೆ ಗಾಂಧೀಜಿ ಮರೆತು ಮುಖವನ್ನು ತೊಳೆಯಲು ಒಂದರ ಬದಲು ಎರಡು ತಂಬಿಗೆ ನೀರನ್ನು ಮುಖವನ್ನು ತೊಳೆಯಲು ಬಳಸಿದರು, ನಂತರ ಅದರ ಬಗ್ಗೆ ಮರುಗುತ್ತಾರೆ, ಈ ಒಂದು ಉದಾಹರಣೆ ನಮಗೆ ಪ್ರೇರಣೆಯಾಗಬೇಕೆಂದು ಅಧ್ಯಕ್ಷಿಯ ಮಾತುಗಳಲ್ಲಿ ಅತ್ಮವಿಮರ್ಶೆಯ ಅಗತ್ಯವನ್ನು ಎಲ್ಲರಿಗೂ ನೆನಪಿಸಿದರು.

ಚರ್ಚೆಯು ನಮ್ಮೆಲ್ಲರಿಗೂ ನದಿಗಳನ್ನು ಉಳಿಸಲು ಸಕ್ರಿಯವಾಗಿ ತೊಡಗಿಕೊಳ್ಳಬೇಕೆಂಬ ಎಚ್ಚರಿಕೆಯ ಕರೆಯಾಗಿತ್ತು ಹಾಗೂ ಆ ಕೆಲಸದಲ್ಲಿ ಸಮಗ್ರ ದೃಷ್ಟಿಕೋನದ ಅವಶ್ಯಕತೆ ಹಾಗೂ ಪ್ರಾಮುಖ್ಯತೆಯನ್ನು ಇಲ್ಲಿಯವರೆಗಿನ ಅನುಭವ ಎತ್ತಿಹಿಡಿಯುತ್ತಿತ್ತು.

ಗ್ರಾಮ ಸೇವಾ ಸಂಘದ ಈ ಪ್ರಯತ್ನ ಇಲ್ಲಿಯವರೆಗೆ ನದಿಗಳನ್ನು ಉಳಿಸುವ ಹೋರಾಟದಲ್ಲಿ ತೊಡಗಿರುವ ಎಲ್ಲಾ ಸಂಸ್ಥೆ, ವ್ಯಕ್ತಿಗಳಿಗೆ ಶಕ್ತಿ ತುಂಬುವ ಪ್ರಯತ್ನವಾಗಿದ್ದು, ಅವರೊಂದಿಗೆ ಈ ಕಾರ್ಯವನ್ನು ಮುಂದುವರೆಸುವ ಬಗ್ಗೆ ಚರ್ಚೆಯಲ್ಲಿದ್ದು, ನಾವು ತೊಡಗಿಕೊಳ್ಳಲು ಉತ್ಸುಕರಾಗಿದ್ದೇವೆ. ಈ ಸಂಭಂದ ಮುಂದಿನ ಬೆಳವಣಿಗೆ ಹಾಗೂ ಕಾರ್ಯಕ್ರಮಗಳಲ್ಲಿ ನಿಮ್ಮ ಸಕ್ರಿಯ ಭಾಗವಹಿಸುವಿಕೆಯನ್ನು ಕೋರುತ್ತೇವೆ.
- Photos and videos captured by volunteers Ravi Kiran and Sanketh in addition to student group (Siddhant, Semanti, Suman, Deby, Veeksha, Merlin, Sudhakar, Abhiram, Mitun, Srisharan).
- Program Jointly Organized by Gram Seva Sangh, Lokavidya Vedike, Karnataka Gandhi Smaraka Nidhi, Bharatha Yatra Kendra
ಇಂತಿ
ಗ್ರಾಮ ಸೇವಾ ಸಂಘ
Mobile: 9980043911
Email: GramSevaSanghIndia@gmail.com
Flat #102, Shesha Nivas, 1st Block, 1st Main,
Thyagarajanagar, Bengaluru-560028
Facebook.com/gramsevasanghindia | @gramasevasangha| www.gramsevasangh.org