ರಾಕ್ಷಸ ಆರ್ಥಿಕತೆಯೆಂದು ಇಂದಿನ ವ್ಯವಸ್ಥೆಯನ್ನು ನಾನು ಕರೆದಾಗ ಅದು ನಿಮಗೆ ಬೈಗುಳದಂತೆ ಕೆಳಿಸುವುದು ಖಂಡಿತ. ಬೈಗುಳವಲ್ಲ ಇದು, ಒಂದು ವಾಸ್ತವಿಕ ಚಿತ್ರಣ. ಇಂದಿನ ಆರ್ಥಿಕತೆಯು ತನ್ನ ಗಾತ್ರ ಹಾಗೂ ಗುಣ ಎರಡರಲ್ಲೂ ರಾಕ್ಷಸವೇ ಹೌದು. ನಿವೇ ನೋಡಿ! ವಿಶ್ವವನ್ನೇ ಆವರಿಸಿಕೊಂಡಿದೆ ಇದು. ರಾಷ್ಟ್ರಗಳ ಗಡಿಗಳನ್ನೇ ಅಳಿಸಿ ಹಾಕಿದೆ ಇದು. ಸಮುದಾಯಗಳು ಸಂಸ್ಕøತಿಗಳು ಮಾತೃಭಾಷೆಗಳು ಜನಾಂಗಗಳು ನದಿ ಬೆಟ್ಟ ಕಾಡುಗಳನ್ನು ಅಳಿಸಿಹಾಕಿದೆ ಇದು. ಪುರುಷನನ್ನು ಪ್ರಕೃತಿಯಿಂದ ಪ್ರತ್ಯೇಕಿಸಿ ಏಕಾಂಗಿಯಾಗಿಸಿದೆ ಇದು, ಸಮುದಾಯ ಪ್ರಜ್ಞೆ ಸಹಕಾರ ಗುಣ ಇತ್ಯಾದಿಯಾಗಿ, ಯಾವುದನ್ನು ನಾವು ಮನುಷ್ಯತ್ವ ಅಥವಾ ಮಾನವ ಧರ್ಮ ಎಂದು ಕರೆಯುತ್ತೇವೆಯೋ ಅದೆಲ್ಲವನ್ನೂ ಅಳಿಸಿಹಾಕಿದೆ ಇದು. ಸ್ಪರ್ಧಾತ್ಮಕತೆ, ಹಿಂಸೆ, ಅಸಹನೆ, ಧಾರ್ಮಿಕ ಅಸಹಿಷ್ಣುತೆ ಹಾಗೂ ಶ್ರೀಮಂತಿಕೆಯ ಅಟ್ಟಹಾಸಗಳನ್ನು ಸಾರ್ವತ್ರಿಕಗೊಳಿಸಿದೆ ಈ ರಾಕ್ಷಸ ಆರ್ಥಿಕತೆ.
ಈಗ ಸೋಲತೊಡಗಿದೆ ಇದು. ಮಾತ್ರವಲ್ಲ, ನಮ್ಮನ್ನೂ ಸೋಲಿಸತೊಡಗಿದೆ. ದಸರೆಯ ಕಡೆಯ ದಿನ ಉತ್ತರ ಭಾರತದ ಜನ, ರಾಮನ ಗೆಲುವನ್ನು ಸಂಭ್ರಮಿಸುತ್ತ, ರಾವಣನ ಪ್ರತಿಕೃತಿಯನ್ನು ದಹಿಸುವಾಗ ಅದು ಹೇಗೆ ಸುತ್ತಲು ಉದುರಿ ಬೀಳುತ್ತದೆಯೋ ಹಾಗೆಯೇ ಇದೂ ಕೂಡ ಉದುರಿ ಬೀಳತೊಡಗಿದೆ ನಮ್ಮ ಸುತ್ತ ಮುತ್ತ, ನಮ್ಮ ತಲೆಗಳ ಮೆಲೆ. ಇದರ ಹತ್ತುಹಲವಾರು ಶಿರಸ್ಸುಗಳು ಶಿರಸ್ತ್ರಾಣಗಳು ಗುರಾಣಿ ಕತ್ತಿ ಕಯ್ಯಿ ಕಾಲುಗಳು, ನಮ್ಮ ಮೇಲೆ ಬೀಳತೊಡಗಿದೆ. ಆದರೂ, ನಾವು ರಾಮಭಕ್ತರಾದರೂ, ದಸರೆಯ ಹಬ್ಬ ಆಚರಿಸಲು ಹಿಂಜರಿಯುತ್ತಿದ್ದೇವೆ. ರಾಕ್ಷಸನನ್ನು ಬದುಕಿಸುವ ಕಳ್ಳಯತ್ನ ಮಾಡುತ್ತಿದ್ದೇವೆ.
ಈ ಉದಾಹರಣೆ ನೋಡಿ! ಮಂತ್ರಿಗಳು ಹಾಗೂ ಸರಕಾರಿ ಅಧಿಕಾರಿಗಳಿಗಾಗಿ, ತೆರಿಗೆದಾರರ ಹಣದಿಂದ ಕಾರುಗಳನ್ನು ಕೊಂಡು ಆಟೋಮೊಬೈಲ್ ಕೈಗಾರಿಕೆಗಳನ್ನು ಉಳಿಸುವ ಮಾತನ್ನಾಡುತ್ತಿದೆ ಕೇಂದ್ರ ಸರಕಾರ. ಅಥವಾ ಬ್ಯಾಂಕುಗಳು, ಭಾರಿ ಕಳ್ಳಕುಳಗಳಿಗಾಗಿ ಕ್ರಮ ಮೀರಿ ಸಾಲಕೊಟ್ಟು, ವಸೂಲಿ ಮಾಡಲಾಗದೆ ಕೈಸುಟ್ಟುಕೊಂಡಾಗ, ಅವರನ್ನು ಕ್ಷಮಿಸಿ, ಮತ್ತೆ ಸಾಲ ನೀಡಲೆಂದು ಮತ್ತಷ್ಟು ಹಣ ನೀಡುತ್ತಿದೆ ಕೇಂದ್ರ ಸರಕಾರ. ಇದನ್ನು ರಾಮಭಕ್ತಿ ಎನ್ನುತ್ತಿರೋ ರಾವಣಭಕ್ತಿ ಎನ್ನುತ್ತಿರೋ?
ರಾಕ್ಷಸ ಆರ್ಥಿಕತೆಯನ್ನು ಈ ಹಿಂದೆ ಕೊಂದವನು ರಾಮ. ರಾಮನೊಟ್ಟಿಗೆ ಅಂದು, ಕಪಿಸೇನೆ ಕರಡಿ ಮುದಿಗೃದ್ರ ಇಣಚಿ ನದಿಬೆಟ್ಟ ನೀರುಗಳೂ ಸೇರಿ ಯುದ್ಧಸಾರಿದ್ದವು. ಆಶ್ರಮಗಳು ಆಶ್ರಮವಾಸಿಗಳು ಗುಡ್ಡಗಾಡುಜನರು ರೈತರು ಹಾಗೂ ಕುಶಲಕರ್ಮಿಗಳ ಪರವಾಗಿ ನಡೆದಿತ್ತು ಯುದ್ಧ. ಇಂದಿನ ಯುದ್ಧವು, ರಾಮನ ಹೆಸರಿನಲ್ಲಿ ಕಾರುಗಳು ಕಾರಖಾನೆಗಳು ಹಾಗೂ ಲಂಕೆಯಂತಹ ಸ್ಮಾರ್ಟ ನಗರಗಳ ಪರವಾಗಿ ನಡೆದಿದೆ. ಕಪಿ ಕರಡಿ ಮುದಿಗೃದ್ರಗಳಿರಲಿ, ಪಾಪ ಮನುಷ್ಯರೂ ಸಹ ರಾಮ ರಾಮಾ ಎನ್ನಬೇಕಾಗಿದೆ ಹತಾಶೆಯಿಂದ.
ನಮಗಿಂದು ಖಂಡಿತವಾಗಿ ಬೇಕಿದೆ ಪವಿತ್ರ ಆರ್ಥಿಕತೆ. ನಮಗೆ ಗಾಂಧೀಜಿü ಬೇಡದಿರಲಿ ರಾಮ ಬೇಡದಿರಲಿ ಪವಿತ್ರ ಆರ್ಥಿಕತೆ ಬೇಕಿದೆ. ಪವಿತ್ರ ಆರ್ಥಿಕತೆಯೆಂದರೆ ಎಡಪಂಥೀಯರು ಸಿಡಿಯುತ್ತಾರೆ ತಿಳಿದಿದೆ ನನಗೆ. ಸಂಯಮವಿರಲಿ. ಪವಿತ್ರ ಆರ್ಥಿಕತೆ ಎಂದರೆ ಸಂಯಮದ ಆರ್ಥಿಕತೆಯೇ ಸರಿ. ಹಳೆಯ ರಾಮಭಕ್ತರು ಇದನ್ನು ರಾಮರಾಜ್ಯ ಎಂದು ಕರೆದರು. ಹಳೆಯ ಬಸವಭಕ್ತರು ಇದನ್ನು ಕಾಯಕದಧರ್ಮ ಎಂದು ಕರೆದರು, ಹಳೆಯ ಬುದ್ಧಭಕ್ತರು ಇದನ್ನು ಮಧ್ಯಮಮಾರ್ಗ ಎಂದು ಕರೆದರು, ಇತ್ಯಾದಿ. ಆದರೆ ಪೂಜಾರಿಗಳು ಮಾತ್ರ ಜನಿವಾರ ತೊಡಿಸಿದರೆ ಸಾಕು, ಎಲ್ಲ ಆರ್ಥಿಕತೆಯೂ ಪವಿತ್ರವಾಗುತ್ತದೆ ಎಂದರು. ಅಥವಾ ಶಿವದಾರ ಅಥವಾ ಶಿಲುಬೆ.
ತಮಾಷೆಯೆಂದರೆ ಜನಿವಾರವೂ ಸಹ ಶ್ರಮದಿಂದಲೇ ತಯಾರಾದದ್ದು. ತೊಡುವವರನ್ನು ಕೇಳಿ, ಹೇಳುತ್ತಾರೆ, ತಾವೇ ಹತ್ತಿ ಕಿತ್ತಿತಂದು, ತಾವೇ ಬಿಡಿಸಿ, ತಾವೇ ಸ್ವಚ್ಛಗೊಳಿಸಿ, ತಮ್ಮದೇ ಕೈಗಳಿಂದ ನೂತು, ತಾವೇ ದರಿಸುತ್ತಾರೆ ಜನಿವಾರವನ್ನು. ಗಾಂಧೀಜಿ ಇದೇ ಪವಿತ್ರ ದಾರವನ್ನು ಕೈಮಗ್ಗದಲ್ಲಿ ನೇಯಿಸಿ ಎಲ್ಲರ ಬತ್ತಲನ್ನೂ ಮುಚ್ಚಿ, ಎಲ್ಲರನ್ನೂ ಪವಿತ್ರವಾಗಿಸಿದ್ದರು. ಗಾಂಧೀಜಿ ನಂತರ ಕಾಂಗ್ರೆಸ್ಸಿಗರು ಮತ್ತದೇ ಹಳೆಯಚಾಳಿಗೆ ಬಿದ್ದರು, ಖಾದಿಟೊಪ್ಪಿಗೆಯನ್ನು ಜನಿವಾರದಂತೆಯೇ ಪ್ರತ್ಯೇಕಿಸಿ ತಾವು ಧರಿಸಿದರು. ಬಡಜನರ ಬತ್ತಲನ್ನು ಮರೆತರು. ಈಗ ರಾಮಭಕ್ತರು ರಾಕ್ಷಸಆರ್ಥಿಕತೆಯ ಸೂಟಿನ ಮೇಲೆ ಜನಿವಾರ ತೊಡಿಸಿದ್ದಾರೆ. ಧರ್ಮ ಬೇರೆ ಆರ್ಥಿಕತೆ ಬೇರೆ ಎಂದು ಪ್ರತ್ಯೇಕಿಸಿದ್ದಾರೆ. ಧರ್ಮಕ್ಕೆ ಸಲ್ಲುವ ಸಂಯಮವು ಆರ್ಥಿಕತೆಗೆ ಸಲ್ಲುವುದಿಲ್ಲ ಎಂದಿದ್ದಾರೆ! ಅಲ್ಲಿ ಉಪವಾಸ ಮಾಡಿ, ಇಲ್ಲಿ ಸ್ವೇಚ್ಛಾಚಾರ ಮಾಡಿ ಎಂದಿದ್ದಾರೆ. ಉಳ್ಳವರ ಸ್ವೇಚ್ಛಾಚಾರಕ್ಕೆ ಅನುಕೂಲ ಮಾಡಿಕೊಟ್ಟಿದ್ದಾರೆ ಅಷ್ಟೆ, ಇಬ್ಬರೂ.
ಇವರಿಬ್ಬರ ಆರ್ಥಶಾಸ್ತ್ರದಲ್ಲೂ ಸಂಯಮಕ್ಕೆ ಸ್ಥಳವಿಲ್ಲ. ಮನಮೋಹನ ಸಿಂಹರಿರಲಿ ನಿರ್ಮಲ ಸೀತಾರಾಮರಿರಲಿ ಇಬ್ಬರೂ ಸ್ವೇಚ್ಚಾಚಾರಿ ಆರ್ಥಿಕತೆಯ ಬೆಂಬಲಿಗರೇ ಸರಿ. ಉತ್ಪಾದನೆ ಹೆಚ್ಚಿಸು, ಬಳಕೆ ಹೆಚ್ಚುತ್ತದೆ, ಬಳಕೆ ಹೆಚ್ಚಿದರೆ ಲಾಭದಾಯಕತೆ ಹೆಚ್ಚುತ್ತದೆ ಎಂದೇ ಹೇಳುತ್ತಾರೆ ಇಬ್ಬರೂ. ಇಲ್ಲದ ಬೇಡಿಕೆಯ ಮೇಲೆ ನಿಂತಿದ್ದಾರಾದ್ದರಿಂದ, ಉತ್ಪಾದಿಸಿ ಉತ್ಪಾದಿಸಿ ಉರುಳಿಬಿದ್ದಿದೆ ಇಬ್ಬರದ್ದೂ ಶಾಸ್ತ್ರ. ಸ್ವಯಂಚಾಲಿತಯಂತ್ರ ಸಿಕ್ಕಿದೆಯೆಂದು ಸಂಯಮವಿಲ್ಲದೆ ಉತ್ಪಾದಿಸುತ್ತ ಹೋದರೆ ಲಾಭಬಡುಕ ಉದ್ಯಮಿಗಳಿಗೆ ಹಾಗೂ ಲಾಭಬಡುಕ ಸರಕಾರಗಳಿಗೆ ಲಾಭವೇ ಹೊರತು ಮನುಷ್ಯರಿಗಲ್ಲ. ಎಷ್ಟೆಂದು ಕೊಂಡಾನು ಹೇಳಿ ಮಾನವ. ಮನುಷ್ಯರೇ ಇರದೆ ಉತ್ಪಾದನೆ ಮಾಡಿದರೆ ಮಾಲಿಕನಿಗೆ ಲಾಭ ಖಂಡಿತ. ಅಥವಾ ಶೇರುದಾರನಿಗೆ ಖಂಡಿತ. ಮನುಕುಲವನ್ನೇ ಶೇರುದಾರರನ್ನಾಗಿಸಿ ಶ್ರೀಮಂತರನ್ನಾಗಿಸುತ್ತೇವೆ ಎಂದು ಸುಳ್ಳು ಹೇಳಿದರು ಇಬ್ಬರೂ. ಈಗ ಶೇರು ಪೇಟೆಗಳೇ ದಿವಾಳಿಯಾಗುತ್ತಿವೆ.
ಪವಿತ್ರ ಆರ್ಥಿಕತೆಯೆಂದರೆ ಅತ್ಯಂತ ಕಡಿಮೆ ಹೂಡಿಕೆಮಾಡಿ ಅತ್ಯಂತ ಹೆಚ್ಚು ಜನರಿಗೆ ದುಡಿಮೆಯ ಮಾರ್ಗ ತೋರಿಸುವ ವ್ಯವಸ್ಥೆ. ಹಣದ ಕಡಿಮೆ ಹೂಡಿಕೆಯೂ ಹೌದು, ಪ್ರಕೃತಿಯ ಕಡಿಮೆ ಹೂಡಿಕೆಯೂ ಹೌದು. ಇವೆರಡೂ ಹೂಡಿಕೆ ಕಡಿಮೆಯಾದಷ್ಟೂ ಪ್ರಕೃತಿಗೆ ಒಳ್ಳೆಯದು, ಪುರುಷನಿಗೂ ಒಳ್ಳೆಯದು. ಹೂಡಿಕೆ ಕಡಿಮೆಯಾದದ್ದರಿಂದ ಹಣದ ಲಾಭ ಕಡಿಮೆ ಈ ಆರ್ಥಿಕತೆಯಲ್ಲಿ. ಆದರೆ ಪರಿಸರದ ಲಾಭ ಸಮಾಜದ ಲಾಭ ಹಾಗೂ ಸಂಸ್ಕøತಿಯ ಲಾಭ ಹೆಚ್ಚು. ಪವಿತ್ರವಾದದ್ದು ಕಷ್ಟಕರವಾದದ್ದೂ ಹೌದು. ಸುಲಭದ ದುಡಿಮೆಗೆ ಒಗ್ಗಿಕೊಂಡು ಮೈಗಳ್ಳರಾಗಿರುವ ನಮಗೆ, ಕಷ್ಟ ಕಷ್ಟ. ಆದರೆ ಬೇರೆ ದಾರಿಯಿಲ್ಲ.
ಪಾವಿತ್ರ್ಯದ ಮತ್ತೊಂದು ಉದಾಹರಣೆ ನೀಡಿ ಲೇಖನ ಮುಗಿಸುತ್ತೇನೆ. ಅದುವೆ ತೀರ್ಥ. ಮಂದಿರಗಳಲ್ಲಿ, ಬೆಳ್ಳಿಯ ಚಮಚದಿಂದ ಬೊಗಸೆಗೆ ಎಸೆಯಲ್ಪಡುವ ನೀರು, ಅರ್ಥಾತ್ ನದಿಯನೀರು ತೀರ್ಥ. ಗಂಗೆಯೂ ಆದೀತು ಯಮುನೆಯೂ ಆದೀತು ಗೋದಾವರಿ ಕೃಷ್ಣೆ ಕಾವೇರಿ ತುಂಗೆ ಯಾವುದೂ ಆದೀತು. ನದಿಯ ನೀರಿನ ಪಾವಿತ್ರ್ಯ, ಮೃಗದ ಮೂತ್ರದಿಂದ ಕೆಡುವುದಿಲ್ಲ ಅಥವಾ ದಲಿತ ಮಿಂದದ್ದರಿಂದ ಕೆಡುವುದಿಲ್ಲ. ಆದರೆ, ಕಾರಖಾನೆಗಳು ಮೂತ್ರಿಸಿದಾಗ ಖಂಡಿತವಾಗಿ ಕೆಡುತ್ತದೆ. ಒಟ್ಟು ಕತೆಯ ನೀತಿಯೆಂದರೆ, ಶ್ರಮ ಹಾಗೂ ಶ್ರಮಜೀವಿಗಳು ಖಂಡಿತವಾಗಿ ನಮ್ಮ ನಿಮ್ಮ ಪಾವಿತ್ರ್ಯ ಕೆಡಿಸುವುದಿಲ್ಲ. ಕಾರಖಾನೆಗಳು ಕೆಡಿಸುತ್ತವೆ.
ಎಲ್ಲರೂ ಸೇರಿ ಪವಿತ್ರರಾಗೋಣ ಬನ್ನಿ. ಕಾರಖಾನೆಗಳ ಅಪವಿತ್ರಮೂತ್ರವು ನದಿಗಳಿಗೆ ಹರಿಯದಂತೆ ತಡೆಯೊಣ ಬನ್ನಿ. ಪವಿತ್ರವಾದದನ್ನು, ಬೆಳೆಯೋಣ, ನೇಯೋಣ, ಕೊಳ್ಳೋಣ, ಬನ್ನಿ. ಕೊಂಡರೂ, ಹಿತಮಿತವಾಗಿ ಕೊಳ್ಳೋಣ ಬನ್ನಿ. ಇದನ್ನು ನಮಗೆ ಮನಮೋಹನ ಸಿಂಗರೂ ಹೇಳುವುದಿಲ್ಲ ನಿರ್ಮಲ ಸೀತಾರಾಮರೂ ಹೇಳುವುದಿಲ್ಲ. ಹೇಳಲಾರರು ಅವರು. ನರೇಂದ್ರ ಮೋದಿಯವರಂತೂ ಹೇಳುವ ಆಸಕ್ತಿ ಸಹ ತೋರಿಸುತ್ತಿಲ್ಲ. ಚಂದನತ್ತ ನೋಡುತ್ತ ಮುಗುಳು ನಗುತ್ತ ಅಥವಾ ಅತ್ತ ಶಿವನ ಕಣ್ಣೊರೆಸುತ್ತ, ಸುತ್ತಲ ಪ್ರಪಂಚ ಮರೆತು, ಕುಳಿತು ಬಿಟ್ಟಿದ್ದಾರೆ. ರಾಮ ರಾಮಾ!
ಪ್ರಸನ್ನ
09/09/2019
ಶ್ರಮಜೀವಿ ಆಶ್ರಮ, ಹೆಗ್ಗೋಡು-577 417